ಸಾಬೀತಾದ ನೋಟು ನಿಷೇಧದ ಅನಾಹುತಗಳು
ನೋಟು ನಿಷೇಧದ ನಂತರ ಬ್ಯಾಂಕುಗಳಿಗೆ ವಾಪಸಾಗಿರುವ ಹಳೆಯ ನೋಟುಗಳ ಬಗ್ಗೆ ಆರ್ಬಿಐ ಒದಗಿಸಿರುವ ಮಾಹಿತಿಗಳು ನೋಟು ನಿಷೇಧ ಕ್ರಮದ ಅನಾಹುತಗಳನ್ನು ಸಾಬೀತು ಮಾಡಿವೆ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ನೋಟು ನಿಷೇಧ (ಡಿಮಾನಿಟೈಸೇಶನ್) ಕ್ರಮದ ಭಾಗವಾಗಿ ನಿಷೇಧವಾಗಿದ್ದ ಅಧಿಕ ಮೌಲ್ಯದ ನೋಟುಗಳಲ್ಲಿ ಶೇ.೯೯.೩ ರಷ್ಟು ನೋಟುಗಳು ಬ್ಯಾಂಕ್ ವ್ಯವಸ್ಥೆಗೆ ಹಿಂತಿರುಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕು (ಆರ್ಬಿಐ) ತನ್ನ ೨೦೧೭-೧೮ರ ವಾರ್ಷಿಕ ವರದಿಯಲ್ಲಿ ಘೋಷಿಸಿದೆ. ಅದರೊಂದಿಗೆ ಕಪ್ಪು ಹಣವನ್ನು ತಡೆಗಟ್ಟುವುದರಲ್ಲಿ ನೋಟು ನಿಷೇಧದ ಕ್ರಮ ಯಶಸ್ವಿಯಾಗಿದೆ ಎಂದು ಕೊಚ್ಚಿಕೊಳ್ಳುತ್ತಿದ್ದ ಹಾಲಿ ಕೇಂದ್ರ ಸರ್ಕಾರದ ಪ್ರಚಾರಗಳಿಗೆ ದೊಡ್ಡ ತಡೆಯುಂಟಾಗಿದೆ. ಬ್ಯಾಂಕುಗಳಿಗೆ ಮರಳಿದ ನಿಷೇಧಿತ ನೋಟುಗಳ ಬಗ್ಗೆ ಆರ್ಬಿಐ ವರದಿ ಕೊಡುತ್ತಿರುವುದು ಇದೇ ಮೊದಲಲ್ಲ. ೨೦೧೬ರ ಡಿಸೆಂಬರ್ನಲ್ಲಿ ಒಟ್ಟಾರೆ ನಿಷೇಧಿತ ೧೫.೪೨ ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳಲ್ಲಿ ೧೨.೪೪ ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಆ ವೇಳೆಗಾಗಲೇ ವಾಪಸ್ ಬಂದಿರುವುದಾಗಿ ಆರ್ಬಿಐ ಘೊಷಿಸಿತ್ತು. ಆದರೆ ಅದು ಉತ್ಪ್ರೇಕ್ಷಿತ ವರದಿಯೆಂದು ಸರ್ಕಾರ ನಿರಾಕರಿಸಿತ್ತು. ಅದಕ್ಕೆ ಕಾರಣ ಸರ್ಕಾರವು ನೋಟು ನಿಷೇಧದಿಂದಾಗಿ ೩-೪ ಲಕ್ಷ ಕೋಟಿ ರೂಗಳಷ್ಟು ಕಪ್ಪುಹಣ ಬ್ಯಾಂಕುಗಳಿಗೆ ಮರಳುವುದಿಲ್ಲವೆಂದು ನಿರೀಕ್ಷಿಸಿತ್ತು. ಸರ್ಕಾರದ ನಿರೀಕ್ಷೆಗೆ ಆರ್ಬಿಐ ನೀಡಿದ ವಾಸ್ತವಿಕ ವರದಿ ವ್ಯತಿರಿಕ್ತವಾಗಿದ್ದರಿಂದ ಸರ್ಕಾರ ಅದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ.
ಅದೇ ಸಮಯದಲ್ಲಿ ತನ್ನ ವ್ಯವಸ್ಥೆಯ ದಕ್ಷತೆ ಮತ್ತು ಸಾಮರ್ಥ್ಯಗಳ ಬಗ್ಗೆ ಆರ್ಬಿಐ ಸಹ ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಒಂದು ವರ್ಷದ ಕೆಳಗಿನ ತನ್ನ ವಾರ್ಷಿಕ ವರದಿಯಲ್ಲಿ ಅದು ೨೦೧೭ರ ಜೂನ್ ೩೦ರ ವೇಳೆಗೆ ೧೫.೨೮ ಲಕ್ಷ ಕೋಟಿ ರೂ.ಗಳಷ್ಟು ಮೌಲ್ಯದ ನೋಟುಗಳು ವಾಪಸ್ ಬಂದಿವೆಯೆಂದು ಹೇಳಿತ್ತು. ಇದೀಗ ಭರ್ತಿ ಎರಡು ವರ್ಷಗಳು ಕಳೆದ ನಂತರ ಸರ್ಕಾರರನ್ನು ಮತ್ತು ಒಟ್ಟಾರೆಯಾಗಿ ಸಾರ್ವಜನಿಕರನ್ನು ಓಲೈಸುವ ಸಲುವಾಗಿ ನಿಷೇಧಿತ ನೋಟುಗಳ ತುಲನೆ ಮತ್ತು ಪರಿಷ್ಕರಣೆಗಳ ಅಗಾಧವಾದ ಕರ್ತವ್ಯವನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಆರ್ಬಿಐ ಘೋಷಿಸಿದೆ. ಹಾಗಿದ್ದಲ್ಲಿ, ನಿಷೇಧಿತ ನೋಟುಗಳ ಬಗೆಗಿನ ಆರ್ಬಿಐನ ಹಿಂದಿನ ಅಂದಾಜಿನಲ್ಲಿ ಎಷ್ಟು ಬದಲಾಗಿದೆ? ೨೦೧೭ರಲ್ಲಿ ಅದು ೧೫.೨೮ ಲಕ್ಷ ಕೋಟಿಗಳಿದ್ದದ್ದು ಈಗ ೧೫.೩೧ ಲಕ್ಷ ಕೋಟಿಗಳು ಎಂದಾಗಿದೆ. ಎಂದರೆ ಕೇವಲ ೦.೨ರಷ್ಟು ಮಾತ್ರ ಬದಲಾವಣೆ. ಮತ್ತು ಎಷ್ಟು ನೋಟುಗಳು ವಾಪಸ್ ಬರಲಿಲ್ಲ? ಕೇವಲ ೧೧,೦೦೦ ಕೋಟಿ ರೂ ಮೌಲ್ಯದ ನೋಟುಗಳು. ಅಥವಾ ಒಟ್ಟಾರೆ ನಿಷೇಧಿತ ನೋಟುಗಳ ಶೇ.೦.೭ರಷ್ಟು ಮಾತ್ರ ಹಿಂತಿರುಗಲಿಲ್ಲ.
ಈ ಬೆಳವಣಿಗೆಯಿಂದ ಸರ್ಕಾರ ತನಗಾಗಿರುವ ಮುಜುಗುರವನ್ನು ಗೌಣಗೊಳಿಸುತ್ತಿದೆಯಾದರೂ ಅದರ ವಾದಗಳ ಮಗ್ಗುಲೇ ಮುರಿದಂತಾಗಿದೆ. ಈ ನಡುವೆ ಆರ್ಬಿಐ ಇನ್ನೂ ಹಲವಾರು ಕಾರಣಗಳಿಗಾಗಿ ಹೆಚ್ಚಿನ ಮುಜುಗರವನ್ನು ಅನುಭವಿಸಬೇಕಾಗಿದೆ. ಹಲಾವರು ಸಂಸ್ಥೆಗಳ ಪ್ರಬುದ್ಧ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ ಸರ್ಕಾರವು ನೋಟುನಿಷೇಧ ಕ್ರಮವನ್ನು ಜಾರಿ ಮಾಡಿತು. ಒಂದು ವರ್ಷದ ಹಿಂದೆಯೇ ಇಂಥಾ ಯಾವುದೇ ದುಸ್ಸಾಹಸಕ್ಕೆ ಕೈ ಹಾಕಬಾರದೆಂದು ತಾನು ಸರ್ಕಾರಕ್ಕೆ ಸಲಹೆ ಮಾಡಿದ್ದಾಗಿ ಆರ್ಬಿಐನ ಈ ಹಿಂದಿನ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಬಹಿರಂಗವಾಗಿಯೇ ಹೇಳಿದ್ದಾರೆ. ಹಾಗೆಯೇ ಆರ್ಬಿಐನ ಬಹುಪಾಲು ಮಾಜಿ ಗವರ್ನರುಗಳು ನೋಟುನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಶ್ರೀಮಂತ ಕುಟುಂಬಗಳು ತಮ್ಮ ಶೇ.೯೦ರಷ್ಟು ಸಂಪತ್ತನ್ನು ಆಸ್ತಿಪಾಸ್ತಿಗಳ ಭೌತಿಕ ಸ್ವರೂಪದಲ್ಲಿ ಶೇಖರಿಸಿಟ್ಟಿರುತ್ತಾರೆಯೇ ವಿನಃ ನಗದಿನ ರೂಪದಲ್ಲಲ್ಲ ಎಂಬುದನ್ನು ಆರ್ಬಿಐ ನ ಕಡತದಲ್ಲಿರುವ ಹಲವಾರು ವಿಶ್ಲೇಷಣಾತ್ಮಕ ದಾಖಲೆಗಳು ಸಾರಿ ಸಾರಿ ಹೇಳುತ್ತವೆ. ಈ ಕಾರಣದಿಂದಲೇ ಸಾಮಾನ್ಯವಾಗಿ ಅಧಿಕ ಮೌಲ್ಯದ ನೋಟುನಿಷೇಧದ ಬಗ್ಗೆ ಸರ್ಕಾರವು ಒತ್ತಡ ಹಾಕಿದಾಗಲೆಲ್ಲಾ ಆರ್ಬಿಐ ವಿರೋಧಿಸುತ್ತಾ ಬಂದಿತ್ತು. ಆದರೆ ಈಗ ಅದರ ನಿರ್ಧಾರಗಳು ಅಧಿಕಾರರೂಢ ಸರ್ಕಾರದ ಧೋರಣೆಗಳನ್ನು ಅವಲಂಬಿಸಿವೆ, ಮತ್ತದು ಯಾವುದೇ ಆಳವಾದ ಬೌದ್ಧಿಕ ತಿಳಿವಿಲ್ಲದ ತರ್ಕಗಳ ಮೇಲೆ ನಿಂತಿದೆ.
ಈ ಹಿಂದೆಯೂ ಅಧಿಕ ಮೌಲ್ಯದ ನೋಟುಗಳನ್ನು ನಿಷೇಧ ಮಾಡಲಾಗಿತ್ತು. ಆದರೆ ಅವು ಚಲಾವಣೆಯಲ್ಲಿದ್ದ ನೋಟುಗಳ ಶೇ.೦.೬ರಷ್ಟು ನೋಟುಗಳಷ್ಟೇ ಆಗಿದ್ದವು. ಆದರೆ ಚಲಾವಣೆಯಲ್ಲಿದ್ದ ಶೇ.೮೬ರಷ್ಟು ನೋಟುಗಳನ್ನು ನಿಷೇಧ ಮಾಡುವಾಗ ಅದು ಮನೆಮನೆಗಳಲ್ಲಿ ನಗದನ್ನು ಶೇಖರಿಸಿಡುವ ಪ್ರವೃತ್ತಿ ಮತ್ತು ಒಟ್ಟಾರೆ ದೇಶದ ಆರ್ಥಿಕ ಸಂರಚನೆಗಳ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದೆಂಬ ಬಗ್ಗೆ ಸಾಕಷ್ಟು ಬೌದ್ಧಿಕ ಕಸರತ್ತುಗಳು ನಡೆಯಬೇಕಿತ್ತು. ನೋಟು ನಿಷೇಧದ ತರುವಾಯ ಚಲಾವಣೆಯಲ್ಲಿರುವ ನೋಟುಗಳ ಪ್ರಮಾಣ ಶೇ.೨೦ರಷ್ಟು ಇಳಿಕೆಯಾಗಿಬಿಟ್ಟಿತು. ಇದರಿಂದಾಗಿ ನೋಟುಗಳು ಮತ್ತು ಜಿಡಿಪಿಗಳ ನಡುವಿನ ಅನುಪಾತ ಶೇ.೧೨.೨ರಿಂದ ಶೇ. ೮.೮ಕ್ಕೆ ಇಳಿಯಿತು. ಆಗ ಆರ್ಬಿಐ ಇದರ ಬಗ್ಗೆ ಹೆಮ್ಮೆಯಿಂದ ಹೇಳಿಕೆಯೊಂದನ್ನು ನೀಡಿ ಈ ಅನುಪಾತವು ಹಲವಾರು ಅಭಿವೃದ್ಧಿ ಹೊಂದಿದ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ಮಾರುಕಟ್ಟೆ ಆರ್ಥಿಕತೆಗಳಿಗೆ ಸರಿಸಮನಾಗಿದೆ ಎಂದು ಕೊಚ್ಚಿಕೊಂಡಿತ್ತು. ಆದರೆ ವಾಸ್ತವಿಕವಾಗಿ ನೋಡಿದರೆ ಭಾರತದ ಆರ್ಥಿಕತೆಯಲ್ಲಿ ಅಸಂಘಟಿತ ಉದ್ಯಮಗಳ ಮತ್ತು ಅನೌಪಚಾರಿಕ ಕೌಟುಂಬಿಕ ವಲಯವು ಪ್ರಧಾನವಾಗಿರುವುದರಿಂದ ಭಾರತದಲ್ಲಿ ನಗದಿನ ಮೇಲಿನ ಅವಲಂಬನೆಯ ಪ್ರವೃತ್ತಿಯು ಇತರ ಎಲ್ಲಾ ಅಭಿವೃದ್ಧಿ ಹೊಂದಿದ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆ ಆರ್ಥಿಕತೆಗಳಿಗಿಂತ ಸಾಕಷ್ಟು ಹೆಚ್ಚಾಗಿದೆಯೆಂದು ತಿಳಿದುಬರುತ್ತದೆ.
೨೦೧೩ರಲ್ಲಿ ನಡೆದ ಆರನೇ ಆರ್ಥಿಕ ಸೆನ್ಸಸ್ನ ಪ್ರಕಾರ ಅಸ್ಥಿತ್ವದಲ್ಲಿರುವ ೪.೫೪ ಕೋಟಿ ಕೃಷಿಯೇತರ ಸಂಸ್ಥೆಗಳಲ್ಲಿ ಶೇ.೯೨ರಷ್ಟು ಸಂಸ್ಥೆಗಳು ನೊಂದಾಯಿತವಾಗದ ಖಾಸಗಿ ಏಕಒಡೆತನದ ಅಥವಾ ಪಾಲುದಾರಿಕೆಯ ಸಂಸ್ಥೆಗಳಾಗಿವೆ ಅಥವಾ ಇತರ ಸಣ್ಣ ಖಾಸಗಿ ಘಟಕಗಳಾಗಿವೆ. ಅದೇರೀತಿ ಒಟ್ಟಾರೆ ಶ್ರಾಮಿಕರಲ್ಲಿ ಶೇ.೯೨ರಷ್ಟು ಶ್ರಾಮಿಕರು ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತವನ್ನು ನಗದು ರಹಿತ ಸಮಾಜವನ್ನಾಗಿ ಮಾಡಬೇಕೆಂಬ ಒತ್ತಡದ ವಾತಾವರಣದಲ್ಲೂ, ಚಲಾವಣೆಯಲ್ಲಿರುವ ನಗದಿನ ಪ್ರಮಾಣ ೨೦೧೭-೧೮ರಲ್ಲಿ ಶೇ.೩೭ರಷ್ಟು ಹೆಚ್ಚಾಗಿದೆ. ಹಾಗೆಯೇ ನಗದು ಮತ್ತು ಜಿಡಿಪಿಯ ನಡುವಿನ ಅನುಪಾತ ೨೦೧೬-೧೭ರಲ್ಲಿ ಶೇ.೮.೮ರಷ್ಟಿದ್ದದ್ದು ೨೦೧೭-೧೮ರಲ್ಲಿ ಶೇ.೧೦.೯ಕ್ಕೇರಿದೆ. ಈ ಬಗೆಯ ಪ್ರವೃತ್ತಿ ಭಾರತದ ಆರ್ಥಿಕ ರಚನೆಯಲ್ಲೇ ಅಂತರ್ಗತವಾಗಿದೆ. ಈ ನಡುವೆ ಇಂಥಾ ವಿದ್ಯಮಾನಗಳ ಬಗ್ಗೆ ತನ್ನ ವಿಶ್ಲೇಷಣೆಯನ್ನು ಬದಲಿಸಿಕೊಂಡಿರುವ ಆರ್ಬಿಐ ಪ್ರಕಾರ ಇದೊಂದು ಹೊಸ ಮತ್ತು ಸ್ವಾಗತಾರ್ಹ ವಿದ್ಯಮಾನಾವಾಗಿದೆ ಮತ್ತು ಭಾರತದ ಆರ್ಥಿಕತೆಯ ಚೇತರಿಕೆಯ ಸಂಕೇತವಾಗಿದೆ. ಅಲ್ಲದೆ ಪ್ರವರ್ಧಮಾನ ಆರ್ಥಿಕತೆಗಳಲ್ಲಿ ಭಾರತವು ಅತಿ ಹೆಚ್ಚು ನಗದು ಬಳಸುವ ಆರ್ಥಿಕತೆಯಾಗಿದೆಯೆಂದು ಇದೀಗ ಅದೇ ಆರ್ಬಿಐ ಕೊಚ್ಚಿಕೊಳ್ಳುತ್ತಿದೆ.
ಭಾರತದ ಆರ್ಥಿಕತೆಯ ಸಂರಚನೆಯನ್ನು ಅಮತ್ತು ನಗದು ಶೇಖರಣೆಯ ಬಗ್ಗೆ ಭಾರತದ ಕೌಟುಂಬಿಕ ಪ್ರವೃತ್ತಿಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ನೋಟುನಿಷೇಧದಂಥ ಒಂದು ಮತಿಗೆಟ್ಟ ಕ್ರಮವು ಎಂಥಾ ಹಾನಿಯನ್ನುಂಟುಮಾಡಬಹುದೆಂಬ ಅಂದಾಜು ಸಿಗುತ್ತಿತ್ತು. ಕೆಲವು ಬುದ್ಧಿಜೀವಿಗಳು ಹಾಗೂ ಮಾಧ್ಯಮಗಳು ಹಾನಿಗೊಳಗಾದವರ ಜೀವನ ಕಥನಗಳನ್ನು ಆಧರಿಸಿ ನೋಟು ನಿಷೇಧದ ಕ್ರಮದಿಂದ ಉತ್ಪಾದಕತೆ, ಉದ್ಯೋಗ ಮತ್ತು ಆದಾಯಗಳಿಗಾಗಿರುವ ನಷ್ಟಗನ್ನು ದಾಖಲಿಸಿರುವುದನ್ನು ಬಿಟ್ಟರೆ ನೋಟು ನಿಷೇಧದಿಂದ ಆಗಿರುವ ಹಾನಿಯ ಬಗ್ಗೆ ಒಂದು ವ್ಯವಸ್ಥಿತ ಅಂದಾಜು ನಡೆದಿಲ್ಲ. ನಮ್ಮ ಅಂಕಿಅಂಶ ದಾಖಲಾತಿ ವ್ಯವಸ್ಥೆಯಲ್ಲಿ ದೆಶದ ಅನೌಪಚಾರಿಕ ಕ್ಷೇತ್ರಗಳ ಬಗೆಗಿನ ದತ್ತಾಂಶಗಳನ್ನು ಸಂಗ್ರಹಿಸುವ ವ್ಯವಸ್ಥೆ ಇಲ್ಲದಿರುವುದು ಅದಕ್ಕೆ ಒಂದು ಕಾರಣವಾಗಿರಬಹುದು. ಅನೌಪಚಾರಿಕ ಕ್ಷೇತ್ರದ ಜಿಡಿಪಿಯನ್ನು ಅಂದಾಜಿಸಲು ಔಪಚಾರಿಕ ಆರ್ಥಿಕತೆಯ ಮಾನದಂಡಗಳನ್ನೇ ಬಳಸಲಾಗುತ್ತಿದೆ. ಉದಾಹರಣೆಗೆ ೨೦೧೮-೧೯ರ ಸಾಲಿನ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಅಭಿವೃದ್ದಿಯ ದರ ಮೊದಲ ೨೦೧೭-೧೮ರ ಮೊದಲ ತ್ರೈಮಾಸಿಕದ ಅವಧಿಯಲ್ಲಿ (-)೧.೮ ಇದ್ದದ್ದು ೨೦೧೮-೧೯ರ ಮೊದಲ ತ್ರೈಮಾಸಿಕದಲ್ಲಿ ಶೇ.೧೩.೫ರಷ್ಟಾಗಿದೆ ಎಂದು ಹೇಳುವಾಗ ಅರೆ ಕಾರ್ಪೊರೇಟ್ ಕ್ಷೇತ್ರದ ಮತ್ತು ಅಸಂಘಟಿತ ವಲಯದ ಅಭಿವೃದ್ಧಿ ದರವನ್ನು ಸಂಘಟಿತ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಮಾನದಂಡಗಳನ್ನಾಧರಿಸಿಯೇ ಲೆಕ್ಕ ಹಾಕಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಜಿಡಿಪಿಯ ಅಭಿವೃದ್ಧಿ ದರವನ್ನೇ ಮುಂದುಮಾಡಿ ಅಸಂಘಟಿತ ವಲಯವೂ ಅಭಿವೃದ್ಧಿ ಹೊಂದಿದೆ ಎಂದು ಪ್ರತಿಪಾದಿಸುವುದು vಪ್ಪಾಗುತ್ತದೆ.
ಕಪ್ಪುಹಣವನ್ನು ತಡೆಗಟ್ಟುವ ಉದ್ದೇಶವು ವಿಫಲವಾಗಿರುವುದು ಸ್ಪಷ್ಟವಾದೊಡನೆಯೇ ಸರ್ಕಾರವು ನೋಟು ನಿಷೇಧದ ನಿಜವಾದ ಉದ್ದೇಶವು ಭಯೋತ್ಪಾದನೆ ಮತ್ತು ನಕ್ಸಲ್ವಾದವನ್ನು ನಿಗ್ರಹಿಸುವುದು, ಶೆಲ್ ಕಂಪನಿಗಳನ್ನು ಮುಚ್ಚಿಸುವುದು, ಹಾಗೂ ತೆರಿಗೆ ಜಾಲವನ್ನು ವಿಸ್ತರಿಸುವುದು ಮತ್ತು ಡಿಜಿಟಲ್ ಪಾವತಿ ಪ್ರವೃತ್ತಿಯನ್ನು ಹೆಚ್ಚಿಸುವುದಾಗಿತ್ತು ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿ ಕಾಣುತ್ತಿದೆ. ಈ ಎಲ್ಲಾ ಉದ್ದೇಶಗಳನ್ನೂ ರಾಷ್ಟ್ರದ ಮೇಲೆ ಅದರಲ್ಲೂ ಬಡಕುಟುಂಬಗಳ ಮೇಲೆ ಸಂಕಷ್ಟಗಳ ಸರಮಾಲೆಯನ್ನು ತಂದೊಡ್ಡದೆಯೂ ಸಾಧಿಸಬಹುದಿತ್ತು.