ರಾಷ್ಟ್ರತ್ವದ ಆಯ್ಕೆ
ಕೆಟಲೋನಿಯಾ ಬಿಕ್ಕಟ್ಟಿನಿಂದ ಇತರ ರಾಷ್ರಪ್ರಭುತ್ವಗಳು ಸಾಕಷ್ಟು ಪಾಠಗಳನ್ನು ಕಲಿಯುವುದಿದೆ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ರಾಷ್ಟ್ರೀಯತಾ ಸಮಸ್ಯೆಯು ಯೂರೋಪಿನಲ್ಲಿ ಹೆಚ್ಚು ಕಡಿಮೆ ಸಂಪೂರ್ಣವಾಗಿ ಬಗೆಹರಿದಿದೆ ಎಂದೇ ಈವರೆಗೆ ಭಾವಿಸಲಾಗಿತ್ತು. ಯೂರೋಪೇತರ ಪ್ರಪಂಚದಲ್ಲಿ ಅದರಲ್ಲೂ ಯೂರೋಪಿನ ಮಾಜಿ ವಸಾಹ್ತು ಮತ್ತು ಅರೆವಸಾಹತುಗಳಲ್ಲಿ ರಾಷ್ಟ್ರೀಯತೆಯ ಪ್ರಶ್ನೆಯು ಇನ್ನೂ ತೀವ್ರ ಹಿಂಸಾಚಾರ ಮತ್ತು ಸಂಘರ್ಷಗಳಿಗೆ ಕಾರಣವಾಗಿರುವುದು ಆ ದೇಶಗಳು ಹಿಂದುಳಿದಿರುವಿಕೆಗೆ ಸಾಕ್ಷ್ಯವೆಂಬಂತೆ ಅಂತರರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸುತ್ತಿದ್ದವು. ಸ್ಪೇನ್ ದೇಶದ ಈಶಾನ್ಯ ಪ್ರಾಂತ್ಯವಾದ ಕೆಟಲೋನಿಯಾದಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳು ಈ ಐರೋಪ್ಯ ಮಿಥ್ಯೆಯನ್ನು ಸಂಪೂರ್ಣವಾಗಿ ನಾಶಗೊಳಿಸಿದೆ.
ಸ್ಪೇನಿನ ಸಾಂವಿಧಾನಿಕ ನ್ಯಾಯಾಲಯವನ್ನು ಮತ್ತು ಕೇಂದ್ರ ಸರ್ಕಾರವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕೆಟಲೋನಿಯಾ ಪ್ರಾಂತ್ಯವು ೨೦೧೭ರ ಅಕ್ಟೋಬರ್ ೧ ರಂದು ತನ್ನ ಜನಕ್ಕೆ ಪ್ರತ್ಯೇಕ ರಾಷ್ಟ್ರ ಬೇಕೆ ಎಂಬ ಬಗ್ಗೆ ಜನಮತಗಣನೆ ನಡೆಸಿತು. ಕೂಡಲೇ ಸ್ಪೇನ್ ಪ್ರಭುತ್ವವು ಜನರ ಮೇಲೆ ದಮನ ಮಾಡಲು ಪ್ರಾರಂಭಿಸಿತು. ಹಾಗಿದ್ದರೂ ಅಸಂಖ್ಯಾತ ಜನ ತಮ್ಮ ಮತ ಚಲಾಯಿಸಲು ಮುಂದೆಬಂದರು. ಆದರೆ ಸ್ಪಾನಿಶ್ ಪೊಲೀಸರು ಶಾಂತಿಯುತವಾಗಿ ಮತದಾನ ನಡೆಸುತ್ತಿದ್ದ ಜನತೆಯ ಮೇಲೆ ದಾಳಿ ನಡೆಸಿ ನೂರಾರು ಜನರನ್ನು ಗಾಯಗೊಳಿಸಿದರು. ಇಷ್ಟಾದರೂ ಶೇ. ೪೨.೩ರಷ್ಟು ಜನ ಮತದಾನ ಮಾಡಿದರು ಮತ್ತು ಅವರಲ್ಲಿ ಶೇ.೯೦.೯ರಷ್ಟು ಜನ ಕೆಟಲೋನಿಯಾದ ಸ್ವಾತಂತ್ಯದ ಪರವಾಗಿ ಮತ ಚಲಾಯಿಸಿದ್ದರು. ಆದರೂ ಕೆಟಲೋನಿಯಾದೊಳಗಡೆಯೇ ಸ್ವತಂತ್ರ ಕೆಟಲೋನಿಯಾವನ್ನು ವಿರೋಧಿಸುವ ಜನರಿದ್ದು ಅವರು ಮತದಾನವನ್ನು ಬಹಿಷ್ಕರಿಸಿದ್ದರು. ಆದರೂ ಇದು ಕೆಟಲೋನಿಯಾ ರಾಷ್ಟ್ರೀಯತೆಗೆ ದಕ್ಕಿದ ಒಂದು ನೈತಿಕ ವಿಜಯವೇ ಆಗಿತ್ತು. ಮತ್ತೊಂದೆಡೆ ತನ್ನ ಹಿಂಸಾಚಾರಗಳ ಕಾರಣದಿಂದಾಗಿ ಸ್ಪೇನಿನ ಪ್ರಭುತ್ವ ಬಯಲುಗೊಂಡಿತ್ತು. ಈ ಹಿಂದೆ ವಸಾಹತು ವಿರೋಧಿ ರಾಷ್ಟ್ರೀಯತೆಗಳು ಅನುಸರಿಸಿದ್ದ ನಾಗರಿಕ ಅಸಹಕಾರಗಳ ಹಿಂದಿದ್ದ ತರ್ಕವೇ ಈಗಿನ ಸ್ಪೇನ್ ಸರ್ಕಾರವನ್ನು ತಲೆತಗ್ಗಿಸುವಂತೆ ಮಾಡಿತ್ತು. ತಮ್ಮ ವಸಾಹತು ಅಧಿಪತ್ಯವು ಹೇಗೆ ಕೊನೆಗೊಂಡಿತೆಂಬ ಇತಿಹಾಸವನ್ನೊಮ್ಮೆ ಐರೋಪ್ಯ ಪ್ರಭುತ್ವಗಳು ನೆನೆಸಿಕೊಳ್ಳುವುದು ಒಳಿತು.