ಒತ್ತಡಗಳಿಗೆ ಮಣಿಯುವ ರಾಷ್ಟ್ರಪತಿಗಳೇ?
ರಾಷ್ಟ್ರಪತಿ ಭವನದಲ್ಲಿ ರಾಮ್ ನಾಥ ಕೋವಿಂದರ ಅವಧಿಯು ಕೇಂದ್ರೀಕರಣದ ಧೋರಣೆಗಳನ್ನು ಇನ್ನಷ್ಟು ಗಟ್ಟಿಪಡಿಸಬಹುದು.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಭಾರತೀಯ ಜನತಾ ಪಕ್ಷದ (ಬಿಜೆಪಿ) ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಿಯನ್ಸ್ (ಎನ್ಡಿಎ-ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟ)ವು ರಾಷ್ಟ್ರಪತಿ ಪದವಿಗೆ ರಾಮ ನಾಥ ಕೋವಿಂದರನ್ನು ಅಭ್ಯರ್ಥಿಯಾಗಿ ಘೋಷಿಸಿರುವುದರಿಂz ಬಿಜೆಪಿಗೆ ಎರಡು ಲಾಭಗಳಿವೆ. ಒಂದೆಡೆ ಅದು ದಲಿತ ಹಿತಾಸಕ್ತಿಗಳ ಬಗೆಗೆ ಬಾಯುಪಚಾರದ ಮಾತುಗಳನ್ನಾಡುತ್ತಲೇ ಮತ್ತೊಂದೆಡೆ ಹೆಚ್ಚೆಚ್ಚು ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳುವ ಅವಕಾಶವನ್ನು ದಕ್ಕಿಸಿಕೊಂಡಿದೆ. ಜುಲೈ ೧೭ರಂದು ನಡೆಯುವ ರಾಷ್ಟ್ರಪತಿ ಚುನಾವಣೆಯ ಫಲಿತಾಂಶವೇನಾಗಬಹುದೆಂಬುದು ಹೆಚ್ಚೂ ಕಡಿಮೆ ಸ್ಪಷ್ಟವಾಗಿಬಿಟ್ಟಿದೆ. ಬಿಜು ಜನತಾ ದಳ್, ಜನತಾ ದಳ್ (ಯುನೈಟೆಡ್), ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್)ನಂಥ ಪಕ್ಷಗಳನ್ನೂ ಒಳಗೊಂಡಂತೆ ಎನ್ಡಿಎ ಗೆ ಸೇರಿಲ್ಲದ ಇತರ ಹಲವಾರು ಪಕ್ಷಗಳು ಈಗಾಗಲೇ ರಾಮ ನಾಥ್ ಕೋವಿಂದ್ ಅವರಿಗೆ ತಮ್ಮ ಬೆಂಬಲವನ್ನೂ ಘೋಷಿಸಿವೆ. ಹೀಗಾಗಿ ರಾಷ್ಟ್ರಪತಿಯನ್ನು ಚುನಾಯಿಸುವ ಮತಕ್ಷೇತ್ರದ ಶೇ.೫೫ರಷ್ಟು ಮತಗಳನ್ನೂ ಕೋವಿಂದ್ ಅವರು ಪಡೆದುಕೊಳ್ಳುವ ನಿರೀಕ್ಷೆ ಇದೆ. ಆದ್ದರಿಂದ ಅವರೇ ಪ್ರಣಬ್ ಮುಖರ್ಜಿ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ರಾಮ ನಾಥ ಕೋವಿಂದರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸುವ ಸಂದರ್ಭದಲ್ಲಿ ಎನ್ಡಿಎ ಮತ್ತು ಬಿಜೆಪಿಯ ಅಧ್ಯಕ್ಷರಾಗಿರುವ ಅಮಿತ್ ಶಾ ರವರು ಕೋವಿಂದರ ಹಿನ್ನೆಲೆಗೆ ಒತ್ತು ಕೊಡುತ್ತಾ ಬಡ ದಲಿತ ಕುಟುಂಬದಲ್ಲಿ ಹುಟ್ಟಿ ಕಷ್ಟಪಟ್ಟು ಮೇಲೆ ಬಂದವರೆಂದು ಬಣ್ಣಿಸಿದರು. ನಿರೀಕ್ಷೆಯಂತೆ ಕೋವಿಂದರ ದಲಿತ ಹಿನ್ನೆಲೆಯು ಸಾಕಷ್ಟು ಆಕರ್ಷಣೆ ಮತ್ತು ಚರ್ಚೆಯನ್ನು ಹುಟ್ಟುಹಾಕಿತು. ಆವರೆಗೆ ಗೋಪಾಲ ಕೃಷ್ಣ ಗಾಂಧಿಯವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಲು ಒಪ್ಪಿಸುವ ಕುರಿತು ಅಳೆದು ಸುರಿದೂ ಲೆಕ್ಕ ಹಾಕುತ್ತಿದ್ದ ಬಹುಪಾಲು ಪ್ರತಿಪಕ್ಷಗಳು ಲೋಕಸಭೆಯ ಮಾಜಿ ಸಭಾಪತಿ ಮೀರಾ ಕುಮಾರ್ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಘೋಷಿಸಿವೆ. ಆ ಮೂಲಕ ಈ ದೇಶದ ಸೇನಾಪಡೆಗಳ ಮತ್ತು ಪ್ರಭುತ್ವದ ಮುಖ್ಯಸ್ಥರ ಹುದ್ದೆಗೆ ಒಬ್ಬ ದಲಿತ ಪುರುಷ ಮತ್ತು ಒಬ್ಬ ದಲಿತ ಮಹಿಳೆಯ ನಡುವೆ ಸ್ಪರ್ಧೆ ನಡೆಯಲು ಕಾಂಗ್ರೆಸ್ ದಾರಿ ಮಾಡಿಕೊಟ್ಟಿದೆ.
ಈ ಬೆಳವಣಿಗೆಯಲ್ಲ್ಲಿ ಹಲವಾರು ಅಂಶಗಳು ಪಾತ್ರ ವಹಿಸಿವೆ. ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಅವರ ಅಸಹಜ ಸಾವು, ಗುಜರಾತಿನ ಊನಾದಲ್ಲಿ ನಾಲ್ವರು ದಲಿತರ ಮೇಲೆ ಗೋ-ರಕ್ಷಕರು ನಡೆಸಿದ ಹಲ್ಲೆ, ಉತ್ತರ ಪ್ರದೇಶದ ಸಹರಾನ್ಪುರ್ನಲ್ಲಿ ದಲಿತರ ಮೇಲೆ ನಡೆದ ಸರಣಿ ಹಲ್ಲೆಗಳನ್ನೂ ಒಳಗೊಂಡಂತೆ ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದಾಳಿಗಳನ್ನು ನಿಲ್ಲಿಸಲು ಬಗ್ಗೆ ಯಾವುದೇ ಪರಿಣಾಮಕಾರಿ ತೆಗೆದುಕೊಳ್ಳದಿರುವುದರಿಂದ ನರೇಂದ್ರ ಮೋದಿ ಸರ್ಕಾರವು ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಕೋವಿಂದ್ ಅವರನ್ನು ರಾಷ್ಟ್ರಾಧ್ಯಕ್ಷ ಪದವಿಯ ಉಮೇದುವಾರರನ್ನಾಗಿ ಮಾಡಿರುವುದು ಮೇಲಿನ ಎಲ್ಲಾ ಘಟನೆಗಳಲ್ಲಿ ಬಿಜೆಪಿ ನಡೆದುಕೊಂಡ ರೀತಿಯನ್ನು ಮುಚ್ಚಿಹಾಕುವ ಒಂದು ಸಿನಿಕ ಪ್ರಯತ್ನವಾಗಿದೆ. ಕೋವಿಂದರ ಉಮೇದುವಾರಿಕೆಯು ಬಿಜೆಪಿ ಮತ್ತು ಸಂಘಪರಿವಾರದ ಇನ್ನೂ ಹಲವಾರು ದೂರಗಾಮಿ ಯೋಜನೆಗಳನ್ನು ಜಾರಿಗೆ ತರಲು ಪೂರಕವಾಗಿದೆ. ಅವುಗಳಲ್ಲಿ ಪ್ರಮುಖವಾದದ್ದು ದಲಿತರ ಎಚ್ಚೆತ್ತ ರಾಜಕೀಯ ಪ್ರಜ್ನೆಯನ್ನು ಭ್ರಷ್ಟಗೊಳಿಸುವುದು ಮತ್ತು ಅಂತರಾಳದಲ್ಲಿ ಬ್ರಾಹ್ಮಣವಾದವನ್ನು ಮತ್ತು ಜಾತಿ ವ್ಯವಸ್ಥೆಯನ್ನು ಎತ್ತಿಹಿಡಿಯುವ ಹಾಗೂ ಅಲ್ಪಸಂಖ್ಯಾತರ ಅತ್ಯಂತ ಕಡು ದ್ವೇಷಿಯಾದ ಸಂಘಪರಿವಾರ ಪ್ರಣೀತ ಏಕರೂಪಿ ಹಿಂದೂವಾದದೊಳಗೆ ದಲಿತರನ್ನು ಒಳಗೊಳ್ಳುವುದು; ಅಂಬೇಡ್ಕರ್ ಅವರ ಪರಂಪರೆಯನ್ನು ವಶಪಡಿಸಿಕೊಳ್ಳುವುದು;ಉತ್ತರ ಭಾರತದಲ್ಲಿ ದಲಿತರನ್ನು ಮತ್ತು ಇತರ ಹಿಂದುಳಿದ ವರ್ಗಗಳಲ್ಲಿ ವಿಭಜನೆ ತಂದು ಅವರನ್ನು ಇತರ ಪಕ್ಷಗಳ ಹಿಡಿತದಿಂದ ತಮ್ಮ ತೆಕ್ಕೆಗೆ ತಂದುಕೊಳ್ಳುವುದು. ಕೋವಿಂದರ ಉಮೇದುವಾರಿಕೆಯು ವಿರೋಧ ಪಕ್ಷಗಳಲ್ಲಿರುವ ಒಡಕನ್ನೂ ಮತ್ತು ಅವರ ಪರಿಣಾಮಶೂನ್ಯ ರಾಜಕೀಯ ತಂತ್ರಗಾರಿಕೆಯ ನಿರರ್ಥಕತೆಯನೂ ಎತ್ತಿತೋರಿಸಿದೆ. ರಾಮ ನಾಥ ಕೋವಿಂದರ ಉಮೇದುವಾರಿಕೆಯ ಹಿಂದಿನ ಅಸ್ಮಿತೆಯ ರಾಜಕೀಯದ ಬಗ್ಗೆ ಮತ್ತು ಬಿಜೆಪಿಯ ಕುತಂತ್ರೀ ರಾಜಕಾರಣದ ಬಗ್ಗೆ ಸಾಕಷ್ಟು ವಿಶ್ಲೇಷಣೆ ಮಾಡಲಾಗಿದ್ದರೂ, ಕೋವಿಂದರ ನಿರೀಕ್ಷಿತ ವಿಜಯದ ದೂರಗಾಮಿ ಪರಿಣಾಮಗಳ ಬಗ್ಗೆಯೂ ಸರಿಯಾದ ಅಂದಾಜು ಹೊಂದಿರಬೇಕಾದದ್ದು ಸಹ ಅಷ್ಟೇ ಮುಖ್ಯವಾಗಿದೆ.